ರಾಜನಿವಾಸ ಟ್ರೇಲರ್ ನೋಡಿದರೆ ತಕ್ಷಣ ಕಾಂತಾರದ ಝಲಕ್ ಕಾಣಿಸೀತು. ಆದರೆ ಇದು ಕಾಂತಾರಕ್ಕಿಂತಲೂ ಮೊದಲೇ ತಯಾರಾದಂಥ ಕಥೆ. ಆದರೆ ಕೃತಿ ರೂಪಕ್ಕೆ ಇಳಿದು ಪರದೆಗೆ ಸಿದ್ಧಗೊಳ್ಳಲು ಇಷ್ಟು ಸಮಯ ತೆಗೆದುಕೊಂಡಿದೆ. ನಿಜ ಹೇಳಬೇಕೆಂದರೆ ಕಾಂತಾರ ಬಂದ ಬಳಿಕ ಹೋಲಿಕೆಯ ಆರೋಪ ಎದುರಾದೀತು ಎಂದು ಸಾಕಷ್ಟು ಬದಲಾವಣೆಯನ್ನು ಕೂಡ ಮಾಡಲಾಗಿದೆ. ಆದರೆ ಇದು ತುಳುನಾಡು ಭಾಗದ ಕಥೆಯಾದ ಕಾರಣ ಸಹಜವಾಗಿ ಒಂದಷ್ಟು ಹೋಲಿಕೆಗಳು ಕಾಣುತ್ತವೆ. ಆದರೆ ಚಿತ್ರದಲ್ಲಿ ಬೇರೆಯೇ ಕಥೆ ಇದೆ ಎನ್ನುತ್ತಾರೆ ನಿರ್ದೇಶಕ ಮಿಥುನ್ ಸುವರ್ಣ.
ರಾಜನಿವಾಸದಲ್ಲಿ ನಾಯಕ ಪಾತ್ರ ನಿರ್ವಹಿಸಿ ರಾಜನಂತೆ ಮೆರೆದಾಡಿರುವವರು ರಾಘವ್. ಹಾಡು ಮತ್ತು ಹೊಡೆದಾಟದ ಗ್ಲಿಂಪ್ಸ್ ಕಂಡವರಿಗೆ ಇದೊಂದು ಮಾಸ್ ಮೂವಿಯಾಗುವ ಎಲ್ಲ ಲಕ್ಷಣಗಳು ಗೋಚರಿಸಿದೆ. ನಾಯಕಿಯಾಗಿ ಕೃತ್ತಿಕಾ ಕಂಗೊಳಿಸಿದ್ದಾರೆ. ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿರುವುದು ಮೇಲ್ನೋಟಕ್ಕೆ ಎದ್ದು ಕಾಣಿಸಿದೆ. ಈ ಎಲ್ಲ ಕಾರಣಗಳಿಂದಲೇ ರಾಜನಿವಾಸ ಕುತೂಹಲ ಮೂಡಿಸಿದೆ.
ಟ್ರೇಲರ್ ಮತ್ತು ಮೂರು ಹಾಡುಗಳು ಈಗಾಗಲೇ ಸಿನಿಮಾ ಪ್ರಿಯರ ಮನಗೆದ್ದಿದೆ. ಟ್ರೇಲರ್ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಪ್ಯಾನ್ ಇಂಡಿಯಾದಲ್ಲಿ ನಿರೀಕ್ಷೆ ಸೃಷ್ಟಿಸಿದೆ. ಸಿನಿಮಾರಂಗದ ಅನೇಕರು ರಾಜನಿವಾಸ ಈ ವರ್ಷದ ಅತ್ಯುತ್ತಮ ಚಿತ್ರವಾಗಲಿದೆ ಎಂದಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಕ್ತಾಯ ಹಂತದಲ್ಲಿದೆ. ಇದೇ ತಿಂಗಳಾಂತ್ಯಕ್ಕೆ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುತ್ತದೆ.











