ಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ಕ್ಷೇತ್ರದಲ್ಲಿ ಹೊಸ ಮುನ್ನುಡಿ ಬರೆದಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ (RTCs) ಸೇವೆಗಳನ್ನು ಒಂದೇ ಡಿಜಿಟಲ್ ಪ್ಲಾಟ್ಫಾರ್ಮ್ಗೆ ತರುವ ‘ಒನ್ ಕರ್ನಾಟಕ ಮೊಬಿಲಿಟಿ’ (One Karnataka Mobility App) ಆ್ಯಪ್ ಅನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಇದರೊಂದಿಗೆ ಕೆಎಸ್ಆರ್ಟಿಸಿ (KSRTC), ವಾಯುವ್ಯ ಸಾರಿಗೆ (NWKRTC) ಹಾಗೂ ಕಲ್ಯಾಣ ಕರ್ನಾಟಕ (KKRTC) ಬಸ್ಗಳಿಗೆ ವಾಟ್ಸಾಪ್ (WhatsApp) ಮೂಲಕ ಟಿಕೆಟ್ ಬುಕ್ ಮಾಡುವ ಹಾಗೂ ರದ್ದುಗೊಳಿಸುವ ಹೈಟೆಕ್ ಸೌಲಭ್ಯಕ್ಕೂ ಅಧಿಕೃತ ಚಾಲನೆ ಸಿಕ್ಕಿದೆ.
ವಿಧಾನಸೌಧದಲ್ಲಿ ನಡೆದ ರಾಜ್ಯ ಸರ್ಕಾರದ 100 ದಿನಗಳ ಸಾಧನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು KSRTC AWATAR 2.0 ಮೊಬೈಲ್ ಆ್ಯಪ್ ಮತ್ತು ವಾಟ್ಸಾಪ್ ಟಿಕೆಟಿಂಗ್ ವ್ಯವಸ್ಥೆಯನ್ನು ಲೋಕಾರ್ಪಣೆಗೊಳಿಸಿದರು. ಪ್ರಯಾಣಿಕರು ನಾಲ್ಕೂ ರಸ್ತೆ ಸಾರಿಗೆ ನಿಗಮಗಳ ಬಸ್ ಟಿಕೆಟ್ಗಳನ್ನು ಒಂದೇ ಆ್ಯಪ್ನಲ್ಲಿ ಬುಕ್ ಮಾಡಬಹುದು ಮತ್ತು ಹಳೆಯ ಬುಕಿಂಗ್ ವಿವರಗಳನ್ನು ಸುಲಭವಾಗಿ ವೀಕ್ಷಿಸಬಹುದಾದ ಆಪ್ ಇದಾಗಿದೆ.
ಸಾರಿಗೆ ಸಂಸ್ಥೆಗಳ ಸೇವೆಗೆ ಸಂಬಂಧಿಸಿದ ದೂರುಗಳನ್ನು ಈ ಆ್ಯಪ್ ಮೂಲಕವೇ ಸಲ್ಲಿಸಬಹುದು. ಅಷ್ಟೇ ಅಲ್ಲದೆ, ದೂರಿನ ಸ್ಟೇಟಸ್ (Status Track) ಪರಿಶೀಲಿಸಲು ಮತ್ತು ಸಮಸ್ಯೆ ಬಗೆಹರಿಯುವವರೆಗೆ ಅದನ್ನು ಮೇಲ್ಮಟ್ಟದ ಅಧಿಕಾರಿಗಳಿಗೆ ರವಾನಿಸಲು (Escalate) ಅವಕಾಶ ಕಲ್ಪಿಸಲಾಗಿದೆ. ಹಂತ-ಹಂತವಾಗಿ ಡಿಜಿಟಲ್ ಬಸ್ ಪಾಸ್ ಸೌಲಭ್ಯವನ್ನು ಪರಿಚಯಿಸಲಾಗುತ್ತಿದ್ದು, ಪ್ರಯಾಣಿಕರು ಆನ್ಲೈನ್ನಲ್ಲೇ ಪಾಸ್ ಪಡೆದು ಕ್ಯೂಆರ್ ಕೋಡ್ (QR Code) ಆಧಾರಿತ ಪರಿಶೀಲನೆಯ ಮೂಲಕ ಪ್ರಯಾಣಿಸಬಹುದೆಂದು ತಿಳಿದು ಬಂದಿದೆ











