ಪುತ್ತೂರು, ಸೆ.11: ಇಂದಿನ ಕಾಲಘಟ್ಟದಲ್ಲಿ ಹ್ಯಾಕಿಂಗ್ ತಂತ್ರಜ್ಞಾನ ಅಭಿವೃದ್ಧಿಯ ಪ್ರತಿಬಿಂಬವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ವಿಶೇಷ ಪರಿಣಿತಿ ಹೊಂದಲು ಇದರ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಕೌಶಲ್ಯ ಮುಖ್ಯವಾಗಿದ್ದು, ಸಾಮಾಜಿಕ ಜಾಲತಾಣದ ಡಿಜಿಟಲ್ ಉತ್ಪನ್ನಗಳ ಬಳಕೆಯನ್ನು ಸರಿಯಾದ ರೀತಿಯಲ್ಲಿ ಮಾಡುವುದರ ಮೂಲಕ ಕೌಶಲ್ಯಾಬಿವೃದ್ಧಿ ಸಾಧ್ಯ. ಇದರ ಮೂಲಕ ಸ್ವಂತ ಕಂಪೆನಿಯನ್ನು ಪ್ರಾರಂಭಿಸಬಹುದು ಹಾಗೂ ಇದು ದೈನಂದಿನ ಜೀವನಕ್ಕೂ ಪ್ರತ್ಯೇಕವಾಗಿ ಅನ್ವಯಿಸುತ್ತದೆ ಎಂದು ಬೆಂಗಳೂರಿನ ರಿಇನ್ಪೋಸೆಕ್ನ ನಿರ್ದೇಶಕ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಸಮರ್ಥ್ ಭಾಸ್ಕರ್ ಭಟ್ ಹೇಳಿದರು.
ಅವರು ವಿವೇಕಾನಂದ (ಸ್ವಾಯತ್ತ) ಮಹಾವಿದ್ಯಾಲಯದ ಗಣಕಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಘಟಕ ಜಂಟಿಯಾಗಿ ಆಯೋಜಿಸಿದ ಎಥಿಕಲ್ ಹ್ಯಾಕಿಂಗ್ – ಪ್ರಾಯೋಗಿಕ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ ಶ್ರೀಕೃಷ್ಣ ಗಣರಾಜ ಭಟ್ ಎಸ್. ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡುತ್ತ, ನಾವು ಪ್ರಸ್ತುತ ತಾಂತ್ರಿಕವಾಗಿ ಮುಂದುವರೆದಿದ್ದು, ಇದರಿಂದಾಗಿ ಶಿಕ್ಷಣದಿಂದ ಹಿಡಿದು ಆರೋಗ್ಯ ಸೇವೆ ಮತ್ತು ಆಡಳಿತದವರೆಗೆ ಡಿಜಿಟಲ್ ಸೇವೆ ವಿಸ್ತಾರಗೊಂಡಿದೆ. ಇದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪ್ರಮುಖ ಪಾತ್ರವಹಿಸುತ್ತಿದೆ. ತಂತ್ರಜ್ಞಾನ ಮುಂದುವರೆದಂತೆ ಸೈಬರ್ ಅಪರಾಧಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದು, ನಮ್ಮ ವೈಯಕ್ತಿಕ ಮಾಹಿತಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿವಾಗಿದೆ ಎಂದರು.
ವೇದಿಕೆಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಿರಿಯ ಸೈಬರ್ ಸೆಕ್ಯುರಿಟಿ ಸಹಾಯಕ ಮತ್ತು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಕೌಶಿಕ್ ಜಿ.ಎನ್ ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಾರ್ಯಗಾರ ನಡೆಯಿತು.
ಕಾರ್ಯಕ್ರಮವನ್ನು ಗಣಕಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಪರೀಕ್ಷಾಂಗ ಕುಲಸಚಿವ ಪ್ರಕಾಶ್ ಕುಮಾರ್ ಪಿ. ಸ್ವಾಗತಿಸಿ, ಗಣಕಶಾಸ್ತ್ರ ವಿಭಾಗದ ಉಪನ್ಯಾಸಕಿ ಅನುರಾಧ ವಂದಿಸಿ, ದ್ವಿತೀಯ ಬಿಸಿಎ ವಿಭಾಗದ ವಿದ್ಯಾರ್ಥಿನಿ ತನ್ಮಯಿ ನಿರೂಪಿಸಿದರು.












